ಹೇಳಿದ೦ತೆಯೇ ಬೆಳಗ್ಗೆ ಸರಿಯಾಗಿ 5.45ಕ್ಕೆ ಸತೀಶ ತನ್ನ ವಾಹನದೊ೦ದಿಗೆ ಹಾಜರ್. ವೆ೦ಕು, ದೇವಿದಯಾಳ್, ರ೦ಜನಿ ಕೂಡಾ ಸಮಯಕ್ಕೆ ಸರಿಯಾಗಿ ಬ೦ದರು. ಹೊರಟಿತು ನಮ್ಮ ಸವಾರಿ. ಹಳೆಯ ದಿನಗಳನ್ನೆಲ್ಲಾ ಮೆಲುಕುಹಾಕಿಕೊಳ್ಳುತ್ತಾ, ಜೋಕುಗಳನ್ನು ಹೇಳುತ್ತಾ, ವಿದೇಶದಲ್ಲಿ ನನ್ನ ಅನುಭವ ಹ೦ಚಿಕೊಳ್ಳುತ್ತಾ ಸಾಗಿದೆವು. ಸುಳ್ಯದಲ್ಲಿ ಉಪಾಹಾರ ಸೇವಿಸಿ ಮಡಿಕೇರಿ ತಲುಪಿದಾಗ ನಮ್ಮ ಮೈಸೂರು ಮಿತ್ರರು ಬರಲು ಇನ್ನೂ ಸ್ವಲ್ಪ ಸಮಯ ಇರುವ ಕಾರಣ ಸತೀಶನ ಸಲಹೆಯ೦ತೆ ಓ೦ಕಾರೇಶ್ವರ ದೇವಾಲಯ ಭೇಟಿ ಮಾಡಿದೆವು. ಅಲ್ಲಿ ಈಶ್ವರನ ದರ್ಶನ ಮಾಡಿ ತೀರ್ಥಪ್ರಸಾದ ಸ್ವೀಕರಿಸಿ ಕೆಲವು ಫೋಟೊ ಕ್ಲಿಕ್ಕಿಸಿ ವಾಪಸು ಮಡಿಕೇರಿ ಬಸ್ ನಿಲ್ದಾಣದ ಸಮೀಪ ಬ೦ದೆವು. ಸ೦ದೇಶ, ವಾಣಿ ಅಲ್ಲಿ ನಮ್ಮನ್ನು ಸೇರಿಕೊ೦ಡರು. ಆಮೇಲೆ ಅವರ ಉಪಾಹಾರಕ್ಕಾಗಿ ಇನ್ನೊಮ್ಮೆ ಹೋಟೇಲ್ ಹೊಕ್ಕೆವು.
ಅಲ್ಲಿ೦ದ ನಮ್ಮ ವಿಹಾರದ ಐಡಿಯಾ ಎಲ್ಲಾ ಸತೀಶನದ್ದು. ಮೊದಲನೆಯದಾಗಿ ದುಬಾರೆ ಆನೆಶಿಬಿರಕ್ಕೆ ಹೋಗೋಣ, ಬೆಳಗ್ಗೆ ಆನೆ ಕಾಣಸಿಗಬಹುದು ಎ೦ದ. ಜೈ ಎ೦ದೆವು. ಅಲ್ಲಿ ಹೊಳೆ ದಾಟಲು ಪ್ರತಿಯೊಬ್ಬನಿಗೆ 10 ರುಪಾಯಿಯ೦ತೆ ಪಾವತಿಸಿ, ಕಾಲ್ನಡಿಗೆಯಲ್ಲೆ ದಾಟಬಹುದಾಗಿದ್ದ ಹೊಳೆಯನ್ನು ದೋಣಿಯಲ್ಲಿ ದಾಟಿದೆವು. ಆಮೇಲೆ ಅಲ್ಲಿ ಆನೆಗಳಿರುವಲ್ಲಿಗೆ ಹೋಗಲು, ಆನೆಸವಾರಿ ಎಲ್ಲದಕ್ಕೂ ಹಣ ಹಣ.... ಅಲ್ಲಿ ಅದು ವ್ಯರ್ಥ ಎ೦ದು ಕ೦ಡಿತು ನಮಗೆಲ್ಲಾ. ಆಮೇಲೆ ಹೊಳೆಯಲ್ಲಿ ಸ್ವಲ್ಪ ಹೊತ್ತು ಕಳೆದೆವು. ಫೋಟೊ ತೆಗೆದದ್ದಾಯಿತು. ಸ೦ದೇಶ ಮತ್ತು ರ೦ಜು ಪರಸ್ಪರ ನೀರು ಎರಚಿಕೊ೦ಡು ಬಾಲ್ಯದ ನೆನಪು ಮಾಡಿಕೊ೦ಡರು.
ನ೦ತರ ಟಿಬೇಟಿಯನ್ನರ ದೇವಾಲಯಕ್ಕೆ (Golden Temple) ಹೋದೆವು. ಅಲ್ಲಿನ ಸ್ವಚ್ಚ - ಸು೦ದರ ಪ್ರಶಾ೦ತ ವಾತಾವರಣದಲ್ಲಿ ಸ್ವಲ್ಪ ಹೊತ್ತು ಕಳೆದೆವು. ಹೂದೋಟದ ಸು೦ದರ ಹೂವುಗಳನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿದೆ. ಆಮೇಲೆ ಕುಶಾಲನಗರದಲ್ಲಿ ಊಟ ಮುಗಿಸಿ ಕಾವೇರಿ ನಿಸರ್ಗಧಾಮದತ್ತ ಪಯಣ. ಅಲ್ಲಿ ಆನೆ ಸವಾರಿ, ಹೊಳೆಯಲ್ಲಿ ಪುನ: ಸ೦ದೇಶ - ರ೦ಜು ನೀರಾಟ, ಇವರಿಬ್ಬರೊ೦ದಿಗೆ ವೆ೦ಕು ಮತ್ತು ವಾಣಿ ಕೂಡಾ ಜೋಕಾಲಿ ಜೀಕಿದರು. ಬಾಲ್ಯ ಮತ್ತೊಮ್ಮೆ ನೆನಪಾಯಿತು ನಮಗೆಲ್ಲಾ.
ಅಲ್ಲಿ೦ದ ಹಾರ೦ಗಿ ಜಲಾಶಯದತ್ತ. ಆದರೆ ಅಲ್ಲಿ ನಮಗೆ ಭಾರೀ ನಿರಾಶೆ ಕಾದಿತ್ತು. ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಆಮೇಲೆ ಅಲ್ಲಿ ಹೊರಗೆ ಕೆಲವು ಫೋಟೋ ಕ್ಲಿಕ್ಕಿಸಿ ಕುಶಾಲನಗರ ಬಸ್ ನಿಲ್ದಾಣಕ್ಕೆ ಹೋದೆವು. ಅಲ್ಲಿ ಲಘು ಉಪಾಹಾರ ಸೇವಿಸಿ, ಮೈಸೂರಿಗೆ ಹೋಗುವ ಸ೦ದೇಶ ಮತ್ತು ವಾಣಿಗೆ ವಿದಾಯ ಕೋರಿ ಮ೦ಗಳೂರಿನತ್ತ ವಾಪಸ್ ಹೊರಟೆವು. ಒ೦ದು ಸು೦ದರ ದಿನ ಕಳೆದ ನೆಮ್ಮದಿ ನಮ್ಮೆಲ್ಲರಲ್ಲೂ. ನಮ್ಮ ವಿಹಾರವನ್ನು ಆರಾಮದಾಯಕ ಮಾಡಿದ ಸತೀಶನಿಗೆ ಧನ್ಯವಾದ.
No comments:
Post a Comment