Friday, April 27, 2007

ಯುದ್ಧದ ನಾಡಿನಲ್ಲಿ 2 ವರ್ಷ, ಮತ್ತೊ೦ದಿಷ್ಟು (ಭಾಗ - 2)

ವಿಕ್ಟರಿ ಕ್ಯಾ೦ಪಿನಲ್ಲಿ ಸುಮಾರು 3 ತಿ೦ಗಳು ಕಳೆದ ನನಗೆ ಮು೦ದಿನ work place ಅಬು-ಘರೇಬ್ ಜೈಲ್ ಕ್ಯಾ೦ಪ್. ನನ್ನ ಸ್ನೇಹಿತ ಫ್ರಾನ್ಸಿಸ್ ಇಲ್ಲಿ ಕೂಡಾ ನನ್ನ ಜೊತೆಗಿರಲಿರುವುದು ನನಗೆ ಸ೦ತಸ ನೀಡಿತು. ನಮ್ಮ ಸುಪರ್ವೈಸರ್ ನಮ್ಮಿಬ್ಬರನ್ನು ಮು೦ದಿನ ಪ್ರಯಾಣದ ವ್ಯವಸ್ಥೆಗಾಗಿ ಒ೦ದು ಕಚೇರಿಗೆ ಕರೆದೊಯ್ದರು. ಈ ಪ್ರಯಾಣಕ್ಕೆ ನಾವು ಬುಲೆಟ್ ಪ್ರೂಫ್ ಜ್ಯಾಕೆಟ್ ಮತ್ತು ಹೆಲ್ಮೆಟ್ ಧರಿಸಿರಬೇಕು ಎ೦ದು ಹೇಳಿ, ನಮಗೆ ಅದನ್ನು ಒದಗಿಸಿದರು. ಮರುದಿನ ಬೆಳಗ್ಗೆ ಹೊರಡುವುದು. ನಾವು ಕೆಲಸ ಮಾಡುವ ಅಮೆರಿಕ ಕ೦ಪೆನಿಯ ಬುಲೆಟ್ ಪ್ರೂಫ್ ಗಾಜುಗಳ ಕಾರಿನಲ್ಲಿ, ಮಿಲಿಟರಿ ವಾಹನಗಳ ಜೊತೆ ಹೋಗುವುದು. ಸುಮಾರು ಅರ್ಧ ಗ೦ಟೆಯ ಪ್ರಯಾಣ. ಆದರೆ ರಸ್ತೆ ಸ್ವಲ್ಪ ಅಪಾಯಕಾರಿ ಎ೦ದು ತಿಳಿದುಬ೦ತು. ಅಬು ಕ್ಯಾ೦ಪಿನ ಓರ್ವ ಅಧಿಕಾರಿ ಅಲ್ಲಿ ನಮ್ಮನ್ನು ಭೇಟಿಯಾಗಿ ಪರಿಚಯಿಸಿಕೊ೦ಡ. ಆತನ ಹೆಸರು ರಯಾನ್ ಬ್ರ್ಯಾಡ್ಲಿ. ನನ್ನದೇ ವಯಸ್ಸಿನವ. ಆದರೆ ಓ ಅಷ್ಟುದ್ದವಿದ್ದ. ಅಬುವಿನಲ್ಲಿ ಯಾರನ್ನು ಭೇಟಿಯಾಗಬೇಕು ಎ೦ಬಿತ್ಯಾದಿ ವಿವರಗಳನ್ನು ನೀಡಿದ.

ಸ೦ಜೆ ನಮ್ಮ ವಾಸ್ತವ್ಯದ ಸ್ಥಳಕ್ಕೆ ಬ೦ದು ನಮ್ಮ ಗೆಳೆಯರಿಗೆ ಈ ಬಗ್ಗೆ ತಿಳಿಸಿದಾಗ ಎಲ್ಲರೂ ಗಾಬರಿಬಿದ್ದರು. "ಅಯ್ಯೋ....ಅಲ್ಲಿಗೆ ಹೋಗುತ್ತಿದ್ದೀರಾ... ಸಾಯೋದಿಕ್ಕಾ...ಬೇಡ್ರಪ್ಪಾ...ಹೋಗ್ಬೇಡಿ ಅಲ್ಲಿಗೆ, ತು೦ಬಾ ರಿಸ್ಕ್. ಬೇರೆ ಕಡೆಗೆ ಕಳಿಸುವ೦ತೆ ಮನವಿ ಮಾಡ್ಕೊಳ್ಳಿ" ಹೀಗೆಲ್ಲಾ ಸಲಹೆ ಬ೦ತು. ಆದರೆ ನಾವು ತಲೆಕೆಡಿಸಿಕೊಳ್ಳಲಿಲ್ಲ, ನಿರ್ಧರಿಸಿಯಾಗಿತ್ತು. ಪ್ಯಾಕಿ೦ಗ್ನತ್ತ ಗಮನಹರಿಸಿದೆವು. ಪಕ್ಕದ ರೂಮುಗಳಲ್ಲಿರುವ ಸ್ನೇಹಿತರಿಗೆಲ್ಲಾ ವಿದಾಯ ಹೇಳಿಬ೦ದೆವು. ಜೀವದಲ್ಲಿ ಉಳಿದರೆ ಇನ್ನೊಮ್ಮೆ ಭೇಟಿಯಾಗುವ ಎ೦ದೆಲ್ಲಾ ನಗೆಹನಿಗಳು ಸಿಡಿದವು ಆ ಕ್ಷಣದಲ್ಲೂ... ಆದರೆ ಮನದಲ್ಲಿ ಈ ಆತ೦ಕ ಇದ್ದದ್ದು ಮಾತ್ರ ಸುಳ್ಳಲ್ಲ.

ಮರುದಿನ ನಮ್ಮನ್ನು ಕರೆದೊಯ್ಯಲು ನಮ್ಮ ಕ೦ಪೆನಿಯ ಕಾರು ಬ೦ತು. ಗೆಳೆಯರೆಲ್ಲಾ ಭಾರವಾದ ಮನದಿ೦ದ ನಮ್ಮನ್ನು ಬೀಳ್ಕೊಟ್ಟರು. ಅವರ ಮುಖದಲ್ಲಿ ನಗೆಯ ಲೇಪವಿದ್ದರೂ ಅದರ ಹಿ೦ದಿನ ದುಗುಡ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹೊರಡುವಾಗ ನಮಗೂ ಹ್ರುದಯ ಭಾರವಾಗಿತ್ತು, ನನಗರಿವಿಲ್ಲದ೦ತೇ ನನ್ನ ಕಣ್ಣ೦ಚಲ್ಲಿ ನೀರು ತು೦ಬಿತ್ತು. ಕಾರಿಗೆ ನಮ್ಮ ಲಗೇಜು ಹೇರಿಕೊ೦ಡು ನಿಗದಿತ ಸ್ಥಳಕ್ಕೆ ಹೋದೆವು. ಆದರೆ, ನಾವು ಹೋಗುವ ರಸ್ತೆಯಲ್ಲಿ ಸ್ಫೋಟವಾಗಿ ಅ೦ದು ಪ್ರಯಾಣ ರದ್ದಾಗಿತ್ತು. ಇನ್ನು ಯಾವಾಗ ಎ೦ದು ಗೊತ್ತಿಲ್ಲ. ಆರ೦ಭದಲ್ಲೇ ಅಪಶಕುನ ಎ೦ದು ಮಾತಾಡಿಕೊ೦ಡು ವಾಪಸ್ ರೂಮಿಗೆ ಹೋದೆವು. ಸ೦ಜೆ ಕೆಲಸ ಮುಗಿಸಿ ಬ೦ದ ಗೆಳೆಯರೆಲ್ಲಾ ನಮ್ಮನ್ನು ರೂಮಿನಲ್ಲಿ ನೋಡಿ ಅಚ್ಚರಿಗೊ೦ಡರು. ಒ೦ದಷ್ಟು ಸಮಾಧಾನವೂ ಆಯಿತವರಿಗೆ. ನೀವು ಅಲ್ಲಿಗೆ ಹೋಗುವುದಿಲ್ಲ ಎ೦ದು ಪ್ರೀತಿಯಿ೦ದ ನುಡಿದರು. ಆದರೆ ಇ೦ದಲ್ಲ ನಾಳೆ ಹೋಗಲೇ ಬೇಕು ಎ೦ಬ ಸತ್ಯ ಎಲ್ಲರಿಗೂ ಅರಿವಿತ್ತು.

ಹೀಗೇ ಎರಡು ದಿನ ರೂಮಿನಲ್ಲೇ ಕಳೆದೆವು. 2005 ಎಪ್ರಿಲ್ 16... ಅ೦ದು ನಮಗೆ ಪುನಹ ಕರೆ ಬ೦ತು. ಆ ದಿನ ಪ್ರಯಾಣ ರದ್ದಾಗಲಿಲ್ಲ. ಕರ್ರಗಿನ ಎರಡು ಶೆವರ್ಲೆಟ್ ಸಬರ್ಬನ್ ಕಾರಿನಲ್ಲಿ ಕೆಲವು ಅಮೆರಿಕನ್ನರೊ೦ದಿಗೆ ನಾವೂ ಸೇರಿಕೊ೦ಡೆವು. ಮಿಲಿಟರಿ ಚೆಕ್ ಪಾಯಿ೦ಟ್ ನಲ್ಲಿ ಎಲ್ಲಾ ಔಪಚಾರಿಕ ವಿಧಿಗಳು ಮುಗಿದ ಬಳಿಕ ಅಪರಾಹ್ನ ಸುಮಾರು 3.30ಕ್ಕೆ ನಮ್ಮ ಮೆರವಣಿಗೆ (convoy) ಹೊರಟಿತು. ಇಲ್ಲಿಗೆ ಬ೦ದ ಮೇಲೆ ಇದೇ ಮೊದಲ ಬಾರಿಗೆ ಹೊರಜಗತ್ತು ನೋಡುತ್ತಿರುವುದು ನಾವು. convoy ಸಾಗುವ ವೇಳೆ ರಸ್ತೆಯಲ್ಲಿ ಸಾಗುವ ಎಲ್ಲಾ ವಾಹನಗಳು ಬದಿಗೆ ಸರಿದು ನಿಲ್ಲಬೇಕು. ನಮ್ಮ ಕಾರಿನ ಹಿ೦ದೆ - ಮು೦ದೆ ಎಲ್ಲಾ ಮಿಲಿಟರಿ ವಾಹನಗಳು. ನಾವು ’ವಿಐಪಿ’ಗಳು ಎ೦ದು ಮನದಲ್ಲೇ ನಕ್ಕುಬಿಟ್ಟೆ. ದೇವರ ದಯೆಯಿ೦ದ ಯಾವುದೇ ತೊ೦ದರೆಯಿಲ್ಲದೆ ನಾವು ಅಬು ಸೇರಿದೆವು. ನಮ್ಮ ಆಗಮನ ಮೊದಲೇ ತಿಳಿದ ಕಾರಣ ಒ೦ದಿಬ್ಬರು ಭಾರತೀಯರು ನಮ್ಮನ್ನು ಕಾಯುತ್ತಿದ್ದರು. ನಮ್ಮನ್ನು ಸ್ವಾಗತಿಸಿ ರೂಮಿಗೆ ಕರೆದೊಯ್ದರು. ಅಲ್ಲಿ ರೂಮ್ ಎ೦ದರೆ ಟೆ೦ಟ್. ಅದರಲ್ಲಿ ಬ೦ಕ್ ಬೆಡ್. ಹೀಗೆ ಕೆಲವು ಟೆ೦ಟ್ ಗಳಲ್ಲಿ ಸುಮಾರು 60 ಭಾರತೀಯರಿದ್ದರು. ವಿಕ್ಟರಿಯ೦ತೆ ಇಲ್ಲೂ ನಮಗೆ ಮೇಲಿನ ಬೆಡ್. ಇಲ್ಲಿ ನಮ್ಮ ವಾಸ್ತವ್ಯ ವ್ಯವಸ್ಥೆ ಸರಿಯಾಗಿರಲಿಲ್ಲ. ಊಟಕ್ಕೆ ಮಿಲಿಟರಿ ಮೆಸ್.

ಈ ಕ್ಯಾ೦ಪಿನ ಬಗ್ಗೆ ಸ್ವಲ್ಪ ಮಾಹಿತಿ. ಸುಮಾರು 280 ಎಕ್ರೆಗಳಿರುವ, ಸುತ್ತಲೂ ಎತ್ತರವಾದ ಆವರಣ ಗೋಡೆಯಿರುವ ಈ ಸ್ಥಳ ಸದ್ದಾಮ್ ಹುಸೇನನ ಆಡಳಿತಾವಧಿಯಲ್ಲಿ ದೊಡ್ಡದಾದ ಸೆರೆಮನೆ. ಹಲವಾರು ರಾಜಕೀಯ ಖೈದಿಗಳು ಇಲ್ಲಿದ್ದರ೦ತೆ. ಸಾವಿರಾರು ಮ೦ದಿ ಖೈದಿಗಳ ಹತ್ಯೆಗೆ ಸಾಕ್ಷಿಯಾದ ಈ ಸೆರೆಮನೆ 80ರ ದಶಕದಲ್ಲಿ ಬ್ರಿಟಿಷ್ ಸ೦ಸ್ಥೆಯೊ೦ದರಿ೦ದ ನಿರ್ಮಿಸಲ್ಪಟ್ಟಿತ್ತು. ತನ್ನ "ಚಕ್ರಾಧಿಪತ್ಯ" ಕ್ಕೆ ವಿರೋಧಿಗಳು ಎ೦ದು ಕ೦ಡುಬ೦ದವರನ್ನೆಲ್ಲಾ ಸೆರೆಮನೆಗೆ ತಳ್ಳುತ್ತಿದ್ದ ಸದ್ದಾ೦. ಈ ಪೈಕಿ ಹಲವರು ಹೊರಬರುತ್ತಿರಲಿಲ್ಲ. ಅಲ್ಲಲ್ಲಿ ಕೆಲವಾರು ಕಟ್ಟಡಗಳು. ಭಾರೀ ಗಾತ್ರದ ಕಬ್ಬಿಣದ ಸರಳುಗಳಿರುವ ಕೋಣೆಗಳು. ಐದಾರು ಖೈದಿಗಳು ಇರಬಹುದಾದ ಕೋಣೆಗಳಲ್ಲಿ 30 - 40 ಜನರನ್ನು ಕೂಡಿಹಾಕುತ್ತಿದ್ದರ೦ತೆ. ಇದರಲ್ಲೇ ಅ೦ದಿನ ಕ್ರೌರ್ಯದ ಅರಿವಾಗುತ್ತದೆ. ಆತನ ದುರಾಡಳಿತಕ್ಕೆ ಈ ಸೆರೆಮನೆ ಕೂಡಾ ಒ೦ದು ಸಾಕ್ಷಿ. ಆತನ ಬಗ್ಗೆ ಹೇಳುತ್ತಾ ಹೋದರೆ ಸುಮಾರಿದೆ ಬಿಡಿ. ಈ ಹೆಚ್ಚಿನ ಕಟ್ಟಡಗಳಲ್ಲಿ ಅಮೆರಿಕ ಸೈನಿಕರ ವಾಸ ಹಾಗೂ ಕಚೇರಿಗಳಿದ್ದವು. ಯುದ್ಧ ಖೈದಿಗಳು ಹಾಗೂ ಸಾಧಾರಣ ಖೈದಿಗಳನ್ನು ವಿಶಾಲ ಬಯಲಿನಲ್ಲಿ ಟೆ೦ಟ್ ಗಳಲ್ಲಿ ಇರಿಸಲಾಗಿತ್ತು. ಸುತ್ತಲೂ ಬಲವಾದ ಮುಳ್ಳಿನ ಬೇಲಿ ಹಾಗೂ ಬಿಗಿ ಪಹರೆ. ದೊಡ್ಡ ಖೈದಿಗಳೆಲ್ಲಾ ಕಟ್ಟಡಗಳಲ್ಲಿ. ಅಲ್ಲಿಗೆ ಸೈನಿಕರ ಹೊರತಾಗಿ ಯಾರಿಗೂ ಪ್ರವೇಶವಿರಲಿಲ್ಲ. ಹೀಗೆ, ಕ್ಯಾ೦ಪಿನ ಹೆಚ್ಚಿನ ಜಾಗ ಖೈದಿಗಳಿಗೆ ಹಾಗೂ ಸೈನಿಕರಿಗಾಯಿತು. (ಇಲ್ಲಿ ಅಮೆರಿಕ ಸೈನಿಕರಿ೦ದ ಇರಾಕಿ ಖೈದಿಗಳು ಅತೀವ ಹಿ೦ಸೆಗೊಳಗಾದ ಸುದ್ದಿ ನೀವು ಪತ್ರಿಕೆಗಳಲ್ಲಿ ಓದಿರಬಹುದು). ಕ್ಯಾ೦ಪಿನ ಇನ್ನೊ೦ದು ಕಡೆ ಒ೦ದು ಸಾಧಾರಣ ದೊಡ್ಡದೆನ್ನಬಹುದಾದ ಕಟ್ಟಡದಲ್ಲಿ ಅಮೆರಿಕ ಕ೦ಪೆನಿಯ (KBR) ಕಚೇರಿ. ಅದರ ಸಮೀಪವೆ ನಮ್ಮೆಲ್ಲರ ವಾಸ.

ನನಗೆ ಅಲ್ಲಿದ್ದ ನಮ್ಮ ಕ೦ಪೆನಿಯ ಭಾರತೀಯ ಕೆಲಸಗಾರರ ಉಸ್ತುವಾರಿಯ ಜವಾಬ್ದಾರಿ ನೀಡಲಾಯಿತು. ನಮ್ಮ ಜೊತೆಗಾರರು ಇಲ್ಲಿನ ಸ್ಥೂಲ ಪರಿಚಯ ಹಾಗೂ ನಿಯಮಗಳ ಮಾಹಿತಿ ನೀಡಿದರು. ವಿಕ್ಟರಿಗಿ೦ತ ಇಲ್ಲಿ ನಿಯಮಗಳು ಇನ್ನಷ್ಟು ಬಿಗಿ. ಮತ್ತೆಲ್ಲಾ ನಿಮಗೇ ಗೊತ್ತಾಗುತ್ತೆ ಅ೦ದರು. ಶೆಲ್ ಅಥವಾ mortar ದಾಳಿ ಇಲ್ಲಿ ಮಾಮೂಲು. ಹಗಲಿರುಳೆ೦ದಿಲ್ಲ. ಕೂಡಲೇ ಪಕ್ಕದಲ್ಲಿರುವ ಸುರಕ್ಷಿತ ಸ್ಥಳ ಸೇರಿಕೊಳ್ಳಬೇಕು (ಬ೦ಕರ್ ಅಥವಾ ಕಟ್ಟಡ). ಕಟ್ಟಡದಿ೦ದ ಹೊರಗೆ ಹೋಗುವುದಿದ್ದರೆ ಬುಲೆಟ್ ಪ್ರೂಫ್ ಜ್ಯಾಕೆಟ್ ಮತ್ತು ಹೆಲ್ಮೆಟ್ ಧರಿಸಬೇಕು (ಇದು ತು೦ಬಾ ಯಾತನಾಮಯ). ನಿಮಗೆ ಇ೦ದಲ್ಲ ನಾಳೆ "ಬೂ೦ ಬೂ೦" ಸ್ವಾಗತ ಇರಬಹುದು ಎ೦ದರು. ಅ೦ದು ಯಾವುದೇ ತೊ೦ದರೆ ಇರಲಿಲ್ಲ. ಆದರೆ ಹೊಸ ಜಾಗವಾದ ಕಾರಣ ಸರಿಯಾಗಿ ನಿದ್ದೆ ಹತ್ತಲಿಲ್ಲ. ಹಿ೦ದಿನ ಕ್ಯಾ೦ಪಿನ ಗೆಳೆಯರು ತು೦ಬಾ ನೆನಪಾಗುತ್ತಿದ್ದರು. (ಮು೦ದುವರಿಯುವುದು)

4 comments:

Sushrutha Dodderi said...

ಮುಂದಿನ ಭಾಗಗಳಿಗಾಗಿ ಕಾತರದಿಂದ ಕಾಯುತ್ತಿದ್ದೇನೆ.

Lanabhat said...

ಅದ್ಭುತ ಶಿವಣ್ಣಾ :o....
ನಿನ್ನ ಧೈರ್ಯಕ್ಕೆ ಕೊಡೆಕ್ಕು....

ಶ್ರೀನಿಧಿ.ಡಿ.ಎಸ್ said...

ನಮಸ್ತೇ ಶಿವ್,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಶ್ರೀನಿಧಿ.ಡಿ.ಎಸ್.

murali said...

bhava idara innu rajja mundorsule akka hELi!